1 ಯೆಹೋವ ದೇವರ ವಾಕ್ಯವು ನನಗೆ ಬಂದಿತು: 2 “ಮನುಷ್ಯಪುತ್ರನೇ, ಟೈರಿನ ಆಡಳಿತ ಅಧಿಕಾರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ ‘ನೀನು ಗರ್ವದಿಂದ,
“ನಾನು ಒಬ್ಬ ದೇವರು
ದೇವರ ಸ್ಥಾನದಲ್ಲಿ
ಸಮುದ್ರಗಳ ಮಧ್ಯದಲ್ಲಿ
ಕುಳಿತುಕೊಂಡಿರುವೆನು,” ಎಂದು ಹೇಳಿಕೊಂಡಿದ್ದೀ.
ಆದರೆ ನೀನು ದೇವರಲ್ಲ, ಮನುಷ್ಯನೇ,
ಆದರೂ ನಿನ್ನನ್ನು ನೀನೇ
ದೇವರಿಗೆ ಸಮನೆಂದು ಭಾವಿಸಿದೆ.
3 ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆಯಾ?
ನಿಮ್ಮಿಂದ ಮರೆಮಾಡಲು ಯಾವುದೇ ರಹಸ್ಯವಿಲ್ಲ.
4 ನಿನ್ನ ಜ್ಞಾನದಿಂದಲೂ ನಿನ್ನ ವಿವೇಕದಿಂದಲೂ
ನಿನಗೆ ಐಶ್ವರ್ಯವನ್ನು ಗಳಿಸಿಕೊಂಡಿರುವೆ.
ಚಿನ್ನವನ್ನೂ ಬೆಳ್ಳಿಯನ್ನೂ
ನಿನ್ನ ಭಂಡಾರಗಳಲ್ಲಿ ಇಟ್ಟುಕೊಂಡಿರುವೆ.
5 ವ್ಯಾಪಾರದಲ್ಲಿ ನಿನ್ನ ಅಧಿಕ ಚಾತುರ್ಯದಿಂದಲೂ
ನಿನ್ನ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ.
ನಿನ್ನ ಆಸ್ತಿಯ ನಿಮಿತ್ತ
ನಿನ್ನ ಹೃದಯ ಗರ್ವಪಟ್ಟಿದೆ.
6 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ ‘ನೀನು ದೇವರಂತೆ ಬುದ್ಧಿವಂತನು
ಎಂದು ಭಾವಿಸಿಕೊಂಡಿರುವೆ;
7 ಆದ್ದರಿಂದ ಭಯಂಕರ ಜನಾಂಗದವರಾದ ವಿದೇಶಿಯರನ್ನು
ನಾನು ನಿನ್ನ ಮೇಲೆ ಬೀಳಮಾಡುವೆನು.
ಅವರು ನಿನ್ನ ಸೌಂದರ್ಯ ಮತ್ತು ಜ್ಞಾನದ ವಿರುದ್ಧವಾಗಿ ಖಡ್ಗವನ್ನು ಹಿರಿಯುವರು;
ನಿನ್ನ ಹೊಳೆಯುವ ವೈಭವವನ್ನು ಕೆಡಿಸುವರು.
8 ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು.
ಸಮುದ್ರಗಳ ಮಧ್ಯದಲ್ಲಿ
ಭಯಂಕರವಾದ ಮರಣದ ಹಾಗೆ ನೀನು ಸಾಯುವೆ.
9 ನಿನ್ನನ್ನು ಕೊಲ್ಲಲು ಬರುವವನ ಮುಂದೆ
ಇನ್ನು, “ನಾನು ದೇವರು,” ಎಂದು ಹೇಳುವೆಯೋ?
ನಿನ್ನನ್ನು ಕೊಲ್ಲುವವನ ಕೈಯಲ್ಲಿ
ನೀನು ದೇವರಲ್ಲ ನರಪ್ರಾಣಿಯೇ;
10 ನೀನು ವಿದೇಶಿಯರ ಕೈಯಿಂದ
ಸುನ್ನತಿಹೀನರ ಮರಣಕ್ಕೆ ಗುರಿಯಾಗುವೆ.
ಏಕೆಂದರೆ ನಾನೇ ಇದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳಿದ್ದಾರೆ.’ ”
11 ಯೆಹೋವ ದೇವರ ವಾಕ್ಯವು ಪುನಃ ನನಗೆ ಬಂದಿತು, 12 “ಮನುಷ್ಯಪುತ್ರನೇ, ಟೈರಿನ ಅರಸನ ವಿಷಯದಲ್ಲಿ ಶೋಕಗೀತೆಯನ್ನೆತ್ತಿ ಅವನಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ ‘ನೀನು ಸರ್ವಸುಲಕ್ಷಣ ಶಿರೋಮಣಿ. ಸಂಪೂರ್ಣಜ್ಞಾನಿ,
ಪರಿಪೂರ್ಣ ಸುಂದರವಾದ ನೀನು ಲೆಕ್ಕವನ್ನು ಮುದ್ರಿಸುತ್ತೀ.
13 ದೇವರ ತೋಟವಾದ
ಏದೆನಿನಲ್ಲಿ ನೀನಿದ್ದೆ.
ಮಾಣಿಕ್ಯ, ಪುಷ್ಯರಾಗ, ಪಚ್ಚೆ,
ಪೀತರತ್ನ, ವಜ್ರ, ವೈಡೂರ್ಯ,
ನೀಲ ಗೋಮೇಧಿಕ, ಕೆಂಪು, ಸ್ಪಟಿಕ ಚಿನ್ನ
ಈ ಅಮೂಲ್ಯವಾದವುಗಳಿಂದ ಭೂಷಿತವಾಗಿದ್ದೆ.
ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು
ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು.
14 ನೀನು ರಕ್ಷಕ ಕೆರೂಬಿಯಾಗಿ ಅಭಿಷೇಕಹೊಂದಿದೆ.
ನಾನೇ ನಿನ್ನನ್ನು ನೇಮಿಸಿದ್ದೇನೆ.
ನೀನು ದೇವರ ಪರಿಶುದ್ಧ ಪರ್ವತದ ಮೇಲೆ ಇದ್ದೆ;
ನೀನು ಉರಿಯುತ್ತಿರುವ ಕಲ್ಲುಗಳ ನಡುವೆ ನಡೆದೆ.
15 ನಿನ್ನ ಸೃಷ್ಟಿಯ ದಿನದಿಂದ
ನಿನ್ನಲ್ಲಿ ಅಪರಾಧವು ಸಿಕ್ಕುವ ತನಕ
ನಿನ್ನ ನಡತೆಯು ನಿರ್ದೋಷವಾಗಿ ಕಾಣುತ್ತಿತ್ತು.
16 ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ
ನಿನ್ನಲ್ಲಿ ಹಿಂಸಾಚಾರವು ತುಂಬಿ
ನೀನು ಪಾಪಿಯಾದೆ;
ಆದ್ದರಿಂದ ನಿನ್ನನ್ನು ಅಪವಿತ್ರನೆಂದು ದೇವರ ಪರ್ವತದೊಳಗಿನಿಂದ ನಾನು ತಳ್ಳಿಬಿಟ್ಟೆನು.
ಓ ರಕ್ಷಕ ಕೆರೂಬಿಯೇ,
ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು.
17 ನೀನು ನಿನ್ನ ಸೌಂದರ್ಯದ ನಿಮಿತ್ತ
ಉಬ್ಬಿದ ಮನಸ್ಸುಳ್ಳವನಾದೆ.
ನಿನ್ನ ಮೆರೆತದ ನಿಮಿತ್ತ
ನಿನ್ನ ಬುದ್ಧಿಯನ್ನು ಕಳೆದುಕೊಂಡೆ.
ಇದರಿಂದ ನಾನು ನಿನ್ನನ್ನು ನೆಲಕ್ಕೆ ದೊಬ್ಬಿ
ನೀನು ಅರಸರಿಗೆ ನೋಟವಾಗಲೆಂದೆ ಅವರ ಕಣ್ಣಮುಂದೆ ಎಸೆದೆನು.
18 ನಿನ್ನ ಅಪಾರವಾದ ಪಾಪಗಳಿಂದಲೂ ಅನ್ಯಾಯವಾದ ವ್ಯಾಪಾರಗಳಿಂದಲೂ
ನಿನ್ನಲ್ಲಿನ ಪವಿತ್ರಾಲಯಗಳನ್ನು ಹೊಲಸುಮಾಡಿದೆ.
ಆದಕಾರಣ ನಾನು ನಿನ್ನೊಳಗಿಂದ ಬೆಂಕಿಯನ್ನು ಬರಮಾಡಿದೆನು,
ಅದು ನಿನ್ನನ್ನು ನುಂಗಿಬಿಟ್ಟಿತು.
ನೋಡುವವರೆಲ್ಲರ ಮುಂದೆ
ನಿನ್ನನ್ನು ಬೂದಿಮಾಡುವೆನು.
19 ನಿನ್ನನ್ನು ಅರಿತ ಜನರೆಲ್ಲರೂ
ನಿನ್ನ ವಿಷಯದಲ್ಲಿ ಭಯಗೊಳ್ಳುವರು.
ನೀನು ಸಂಪೂರ್ಣ ಭೀತಿಗೊಳಗಾಗಿ
ಇನ್ನೆಂದಿಗೂ ಇಲ್ಲದಂತಾಗುವೆ.’ ”
ಸೀದೋನಿನ ವಿಷಯವಾದ ಪ್ರವಾದನೆ
20 ಯೆಹೋವ ದೇವರ ವಾಕ್ಯವು ನನಗೆ ಬಂದಿತು, 21 “ಮನುಷ್ಯಪುತ್ರನೇ, ನೀನು ಸೀದೋನಿಗೆ ಅಭಿಮುಖವಾಗಿ ಅದಕ್ಕೆ ವಿರುದ್ಧವಾಗಿ ಪ್ರವಾದಿಸು. 22 ನೀನು ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
25 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಜನಾಂಗಗಳಲ್ಲಿ ಚದರಿಹೋಗಿರುವ ಇಸ್ರಾಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ, ಎಲ್ಲ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಮೇಲೆ ದಾಸ ಯಾಕೋಬನಿಗೆ ನಾನು ಅನುಗ್ರಹಿಸಿದ ಸ್ವಂತ ನಾಡಿನಲ್ಲಿ ವಾಸಿಸುವರು. 26 ಅವರು ನಿರ್ಭಯವಾಗಿ ಅಲ್ಲಿ ವಾಸಿಸುವರು. ಮನೆಗಳನ್ನು ಕಟ್ಟುವರು; ದ್ರಾಕ್ಷಿತೋಟಗಳನ್ನು ನೆಡುವರು. ಹೌದು, ಅವರ ಸುತ್ತಲೂ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯವಾಗಿ ವಾಸಿಸುವರು, ಆಗ ಯೆಹೋವನಾದ ನಾನೇ ಅವರ ದೇವರೆಂದು ತಿಳಿಯುವರು.’ ”